ಜನ ನೋಟ
ರಾಜ್ಯ

ಬೆಲ್ಲದ ಬೆಲೆ ಗಗನಕ್ಕೆ: ಕೆಜಿಗೆ 80 ರೂ. ಗಡಿ ತಲುಪಿದ ದರ

ಹುಬ್ಬಳ್ಳಿ : ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆಜಿಗೆ 75 ರೂ.ಗೆ ತಲುಪಿರುವ ಬೆನ್ನಲ್ಲೇ ಬೆಲ್ಲದ ಬೆಲೆಯೂ 80 ರೂ. ಗಡಿ ಸಮೀಪಿಸಿದೆ. ಹಬ್ಬದ ಸೀಸನ್‌ಗೂ ಮುನ್ನವೇ ಕಳೆದ ಒಂದು ತಿಂಗಳಲ್ಲಿ ಬೆಲೆಗಳು ಬರೋಬ್ಬರಿ ದ್ವಿಗುಣವಾಗಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ಮಹಾಲಿಂಗಪುರ ಎಪಿಎಂಸಿ ಮೂಲಗಳ ಪ್ರಕಾರ, ಕೇವಲ ನಾಲ್ಕು ದಿನಗಳಲ್ಲಿ ಬೆಲ್ಲದ ಬೆಲೆ ಕ್ವಿಂಟಲ್‌ಗೆ 2,700ರಷ್ಟು ಏರಿಕೆಯಾಗಿದೆ. ಕ್ವಿಂಟಲ್‌ಗೆ 4,500 ಇದ್ದ ಬೆಲೆ 7,200ಕ್ಕೆ ಏರಿಕೆಯಾಗಿದೆ. ಹಬ್ಬದ ಸೀಸನ್‌ನಲ್ಲಿ ಸಣ್ಣಪುಟ್ಟ ಬೆಲೆ ಏರಿಳಿತ ಸಾಮಾನ್ಯ. ಆದರೆ ಮಾರುಕಟ್ಟೆಯ ಇತಿಹಾಸದಲ್ಲೇ ಇಷ್ಟು ತೀವ್ರ ಏರಿಕೆ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ರಫ್ತು ಕುಸಿತ

ಕಬ್ಬಿನ ಕೊರತೆಯಿಂದ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಬೆಲ್ಲದ ದರವೂ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಪ್ರೀಮಿಯಂ ಉತ್ಪನ್ನವೆಂದು ಪರಿಗಣಿಸಲ್ಪಡುವ ಮಹಾಲಿಂಗಪುರ ಬೆಲ್ಲದ ಮೇಲೆ ಅವಲಂಬನೆ ಇದೆ. ಮಂಡ್ಯ ಎರಡನೇ ಪ್ರಮುಖ ಮೂಲವಾಗಿದೆ.

ಮಂಗಳವಾರ ಮಹಾಲಿಂಗಪುರ ಬೆಲ್ಲ ಕೆಜಿಗೆ 65ಕ್ಕೆ ಮಾರಾಟವಾಗುತ್ತಿತ್ತು. ಆದರೆ ಈಗ ಬೆಲೆ ಗಣನೀಯ ಏರಿಕೆ ಕಂಡಿದೆ. ಈ ಹಿಂದೆ ಪ್ರತಿದಿನ ಸರಾಸರಿ 15ರಿಂದ 20 ಲೋಡ್ ಬೆಲ್ಲವನ್ನು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ಅದು ಒಂದೆರಡು ಲೋಡ್‌ಗೆ ಕುಸಿದಿದೆ. ಪೂರೈಕೆ ಕಡಿಮೆಯಾಗುತ್ತಿರುವುದು ಹಾಗೂ ಬೇಡಿಕೆ ಹೆಚ್ಚುತ್ತಿರುವುದರಿಂದ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ ಎಂದು ವರ್ತಕರು ತಿಳಿಸಿದ್ದಾರೆ.

ಎಥೆನಾಲ್ ಉತ್ಪಾದನೆಯತ್ತ ಹೆಚ್ಚುತ್ತಿರುವ ಒಲವು ಸಕ್ಕರೆ ಮತ್ತು ಬೆಲ್ಲದ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತಿದೆ. ಎಥೆನಾಲ್ ಮಿಶ್ರಣದ ಗುರಿ 5%ರಿಂದ 20%ಕ್ಕೆ ಹೆಚ್ಚಾಗಿರುವುದು ಹೆಚ್ಚಿನ ಕಾರ್ಖಾನೆಗಳು ಎಥೆನಾಲ್ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡಿದೆ. ಆಹಾರ ಧಾನ್ಯಗಳ ಬಳಕೆ ಎಥೆನಾಲ್ ಉತ್ಪಾದನೆಗೆ ಹೆಚ್ಚಾಗಿ ಬಳಕೆಯಾದಲ್ಲಿ ಅಕ್ಕಿಯ ಬೆಲೆಯ ಮೇಲೂ ಒತ್ತಡ ಉಂಟಾಗಬಹುದು.

ಎಥೆನಾಲ್ ಉತ್ಪಾದನೆಗೆ ನೀಡಲಾಗುತ್ತಿರುವ ಹೆಚ್ಚಿನ ಆದ್ಯತೆಯು ಅಗತ್ಯ ವಸ್ತುಗಳ ಲಭ್ಯತೆಯನ್ನು ಕುಂಠಿತಗೊಳಿಸಿ ಮಾರುಕಟ್ಟೆಯಲ್ಲಿ ಅಸಮತೋಲನ ಸೃಷ್ಟಿಸುತ್ತಿದೆ.

Related posts

ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ

JanaNota Editor

ಆಷಾಢ ಮುಗಿದರೂ ತವರಿನಿಂದ ಬರಲಿಲ್ಲ ಪತ್ನಿ.. ಮನನೊಂದು ಪತಿ ಆತ್ಮಹತ್ಯೆ

JanaNota Editor

ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ: ಮಧು ಬಂಗಾರಪ್ಪ

JanaNota Editor