ಬೆಂಗಳೂರು: ಸ್ಯಾಂಡಲ್ವುಡ್ನ ‘ಬಾದ್ಷಾ’ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು ತಮ್ಮ 53ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುವುದಿಲ್ಲ ಎಂದು ಸುದೀಪ್ ಅಭಿಮಾನಿಗಳಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಹಂಚಿಕೊಂಡಿರುವ ಅವರು, ಕಳೆದ 30 ವರ್ಷಗಳಿಂದ ಅಭಿಮಾನಿಗಳು ತಮ್ಮ ಮೇಲಿಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ಸಿನಿಮಾ, ‘ಬಿಗ್ಬಾಸ್’ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲೂ ಅಭಿಮಾನಿಗಳು ತೋರಿದ ಪ್ರೀತಿ ತಮ್ಮ ಪಾಲಿಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಆದರೆ ಈ ಬಾರಿ ಹುಟ್ಟುಹಬ್ಬ ಆಚರಿಸದಿರಲು ಬಲವಾದ ವೈಯಕ್ತಿಕ ಕಾರಣಗಳಿವೆ ಎಂದು ತಿಳಿಸಿರುವ ಸುದೀಪ್, ತೆರೆದ ಹೃದಯದಿಂದ ಸಂಭ್ರಮಿಸಲು ಸಾಧ್ಯವಾಗದಿದ್ದರೆ ಅದು ಸಂಭ್ರಮವೇ ಅಲ್ಲ ಎಂದು ಹೇಳಿದ್ದಾರೆ.
ಅಭಿಮಾನಿಗಳು ತಮ್ಮ ಊರು-ಪ್ರದೇಶಗಳಲ್ಲಿ ನಡೆಸುವ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಮನವಿ ಮಾಡಿದ ಅವರು, ಸೆಪ್ಟೆಂಬರ್ 2ರಂದು ತಮ್ಮ ಮನೆಯ ಬಳಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದೂ ತಿಳಿಸಿದ್ದಾರೆ. ಉಡುಗೊರೆಗಳನ್ನು ನೀಡುವ ಬದಲು ಅವುಗಳನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ 30 ವರ್ಷಗಳನ್ನು ಅರ್ಪಿಸಿರುವುದನ್ನು ನೆನಪಿಸಿಕೊಂಡ ಸುದೀಪ್, “ಸಿನಿಮಾ ನನ್ನ ಪರಮ ಕಾಯಕ” ಎಂದು ಹೇಳಿದ್ದಾರೆ. ತಮ್ಮ ಸಿನಿಮಾದ ಸಂಭಾಷಣೆಯೊಂದನ್ನು ಉಲ್ಲೇಖಿಸಿ, “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಸದ್ಯ ಸುದೀಪ್ ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ‘ಬಿಗ್ಬಾಸ್ ಕನ್ನಡ ಸೀಸನ್-13’ ನಿರೂಪಣೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.
