ಶಿವಮೊಗ್ಗ: ಮನೆಯ ಬೀರುವಿನ ಲಾಕರ್ನಲ್ಲಿ ಸುರಕ್ಷಿತವಾಗಿ ಇಡಲಾಗಿದ್ದ ₹4.64 ಲಕ್ಷ ಮೌಲ್ಯದ 58 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ನಗರದ ವಡ್ಡಿನಕೊಪ್ಪದ ತಮಿಳು ಕ್ಯಾಂಪ್ನಲ್ಲಿ ನಡೆದಿದೆ. ಕಳ್ಳತನದ ಹಿಂದೆ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಸಂಬಂಧಿಯ ಕೈವಾಡವಿರಬಹುದು ಎಂದು ಶಂಕಿಸಿ ಮಹಿಳೆಯೊಬ್ಬರು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ತಮಿಳು ಕ್ಯಾಂಪ್ ನಿವಾಸಿ ವಿಜಯಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿಜಯಾ ಅವರು ಮಗ, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸವಾಗಿದ್ದಾರೆ. ಮನೆಯ ಹಾಲ್ನಲ್ಲಿದ್ದ ಬೀರುವಿನ ಲಾಕರ್ನಲ್ಲಿ ಚಿನ್ನಾಭರಣಗಳನ್ನು ಇಟ್ಟು ಲಾಕ್ ಮಾಡಲಾಗಿತ್ತು.
ಇತ್ತೀಚೆಗೆ ಬೀರು ತೆಗೆದು ಪರಿಶೀಲಿಸಿದಾಗ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕಳುವಾದ ಆಭರಣಗಳಲ್ಲಿ 32 ಗ್ರಾಂ ತೂಕದ ₹2.56 ಲಕ್ಷ ಮೌಲ್ಯದ ಚೈನ್, 10 ಗ್ರಾಂ ತೂಕದ ₹80 ಸಾವಿರ ಮೌಲ್ಯದ ಚೈನ್, 8 ಗ್ರಾಂ ತೂಕದ ₹64 ಸಾವಿರ ಮೌಲ್ಯದ ಚೈನ್, 4 ಗ್ರಾಂ ತೂಕದ ₹32 ಸಾವಿರ ಮೌಲ್ಯದ ಎರಡು ಬಂಗಾರದ ಉಂಗುರಗಳು ಹಾಗೂ 4 ಗ್ರಾಂ ತೂಕದ ₹32 ಸಾವಿರ ಮೌಲ್ಯದ ಒಂದು ಜೋಡಿ ಬಂಗಾರದ ಬೆಂಡೋಲೆ ಸೇರಿವೆ.
ಒಟ್ಟು 58 ಗ್ರಾಂ ತೂಕದ ₹4,64,000 ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಜಯಾ ಅವರ ಸಂಬಂಧಿಯೊಬ್ಬರು ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಹೀಗಾಗಿ ಅವರ ಮೇಲೆಯೇ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
