ವರದಿ: ಸನತ್ ಶಿವಮೊಗ್ಗ
ಶಿವಮೊಗ್ಗ: ಖಾತೆಯಲ್ಲಿ ಹಣವಿದ್ದರೂ ವಿಮಾ ಕಂತನ್ನು ಆಟೋ ಡೆಬಿಟ್ ಮೂಲಕ ಪಾವತಿಸಿಕೊಳ್ಳದೆ, ಯಾವುದೇ ಮುನ್ಸೂಚನೆ ನೀಡದೆ ವಿಮಾ ಪಾಲಿಸಿ ರದ್ದುಗೊಳಿಸಿರುವುದು ಸೇವಾ ನ್ಯೂನತೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
ಬಾರಂಗಿ ನಿವಾಸಿ ಸುಮ ಅವರ ಪತಿ ನಟರಾಜನಾಯ್ಕ ಅವರು ಕೆನರಾ ಜೀವ ಭೀಮಾ ಸ್ಮಾರ್ಟ್ ಸುರಕ್ಷಾ ಪ್ಲಾನ್ನಡಿ ವಿಮೆ ಪಡೆದಿದ್ದರು. ವಾರ್ಷಿಕ ₹7,854.80 ಕಂತು ಪಾವತಿಯಾಗದೆ ಪಾಲಿಸಿ ರದ್ದಾಗಿತ್ತು. ಬಳಿಕ ವಿಮೆದಾರರು ಮೃತಪಟ್ಟ ಹಿನ್ನೆಲೆಯಲ್ಲಿ ವಿಮಾ ಮೊತ್ತಕ್ಕಾಗಿ ಸಲ್ಲಿಸಿದ್ದ ಮನವಿಯನ್ನು ಸಂಸ್ಥೆ ತಿರಸ್ಕರಿಸಿತ್ತು.
ಈ ಕುರಿತು ಸುಮ ಅವರು ಕೆನರಾ ಬ್ಯಾಂಕ್ ಸೊರಬ ಶಾಖೆ ಹಾಗೂ ವಿಮಾ ಸಂಸ್ಥೆ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಅವರ ಪೀಠವು ₹20 ಲಕ್ಷ ವಿಮಾ ಮೊತ್ತವನ್ನು 4-7-2023ರಿಂದ ಶೇ.8ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ. ವಿಳಂಬವಾದಲ್ಲಿ ಶೇ.10ರ ಬಡ್ಡಿ ಪಾವತಿಸಬೇಕು. ಅಲ್ಲದೆ, ಮಾನಸಿಕ ಹಿಂಸೆಗೆ ₹50 ಸಾವಿರ ಹಾಗೂ ಪ್ರಕರಣದ ಖರ್ಚಿಗಾಗಿ ₹10 ಸಾವಿರ ಪಾವತಿಸುವಂತೆ ಸೂಚಿಸಿದೆ.
