ಜನ ನೋಟ
ರಾಜ್ಯ

ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಆರೋಪಿಯಾಗಿರುವ ದರ್ಶನ್ ಅವರ ವಾದ ಮಾಡುವುದಕ್ಕೆ ಅನುಮತಿ ನೀಡದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ಅಲ್ಲದೆ, ಮಾಫಿ ಸಾಕ್ಷಿಯಾಗಿಸಿದ ನಂತರ ಪ್ರಕ್ರಿಯೆಯ ಲೋಪ ಪ್ರಶ್ನಿಸಬಹುದಾಗಿದೆ. ಆದರೆ, ಮಾಫಿ ಸಾಕ್ಷಿಯನ್ನು ಆಕ್ಷೇಪಿಸುವುದಕ್ಕೆ ಸಹ ಆರೋಪಿಗಳಿಗೆ ಅಧಿಕಾರವಿಲ್ಲ. ಇದೇ ರೀತಿಯಲ್ಲಿ ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಮಾಫಿ ಸಾಕ್ಷಿ ಹೇಳಿಕೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಹಂತದಲ್ಲಿ ನೈಸರ್ಗಿಕ ನ್ಯಾಯ ಪ್ರಕ್ರಿಯೆ ಅನ್ವಯವಾಗುವುದಿಲ್ಲ. ಆದ್ದರಿಂದ ಅರ್ಜಿದಾರರ ವಾದವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ.

ಈ ರೀತಿಯ ಪ್ರಕರಣಗಳಲ್ಲಿ ಸಹ ಆರೋಪಿಗೆ ಆಕ್ಷೇಪದ ಅವಕಾಶ ನೀಡಿದರೆ ಪ್ರಕ್ರಿಯೆಯೇ ಮುಗಿಯುವುದಿಲ್ಲ. ಮಾಫಿ ಸಾಕ್ಷಿಯನ್ನಾಗಿಸಲು ಕೋರ್ಟ್ ಒಪ್ಪಿದ ಬಳಿಕವಷ್ಟೇ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಫಿ ಸಾಕ್ಷಿಯಾಗುವಂತೆ ಕೋರಿರುವ ಅರ್ಜಿಯ ಪ್ರತಿಯನ್ನು ಅರ್ಜಿದಾರ ದರ್ಶನ್ ಅವರಿಗೆ ಒದಗಿಸಿಲ್ಲ. ಇದು ನ್ಯಾಯಾಂಗ ಪ್ರಕ್ರಿಯೆಯ ಲೋಪವಾಗಿದೆ. ಅಲ್ಲದೆ, ಸಹ ಆರೋಪಿಗೆ ದಾರಿ ತಪ್ಪಿಸಿದ್ದಾರೆ.

ಮಾಫಿ ಸಾಕ್ಷಿಯಾದರೆ ಶಿಕ್ಷೆಯಾಗುವುದಿಲ್ಲ ಎಂದು ತಿಳಿಸಿರುವುದು ಈ ಹೇಳಿಕೆ ನೀಡಲು ಕಾರಣವಾಗಿದೆ ಎಂದು ವಿವರಿಸಿದರು. ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

Related posts

ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ : ಪೇದೆ ಬಂಧನ, ಮತ್ತೊಬ್ಬ ಪರಾರಿ

JanaNota Editor

ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ‌ ನಾಯಕರ ಬಂಧನ

JanaNota Editor

ಕರ್ನಾಟಕ ಬಂದ್‌ಗೆ ಸಿಗದ ಪೂರ್ಣ ಬೆಂಬಲ: ಕೆಎಸ್‌ಆರ್‌ಟಿಸಿ, ಮೆಟ್ರೋ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಣೆ

JanaNota Editor