ಕಲಬುರಗಿ: ರೌಡಿಶೀಟರ್ಗಳಿಗೆ ಗಡಿಪಾರು ಮಾಡುವುದಾಗಿ ಬೆದರಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳಾದ ಪರಶುರಾಮ್ ಮತ್ತು ವೀರೇಶ್ ಆರೋಪಿಗಳಾಗಿದ್ದಾರೆ. ರೌಡಿಶೀಟರ್ ಖನ್ನಾ ಪಟೇಲ್ಗೆ ಗಡಿಪಾರು ಮಾಡುವುದಾಗಿ ಬೆದರಿಸಿ ಮೊದಲಿಗೆ ₹50 ಸಾವಿರ ಲಂಚ ಪಡೆದಿದ್ದರು. ಬಳಿಕ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದೇ ವೇಳೆ ಬಾಪುನಗರದ ಮಾಂಗರವಾಡಿ ಗಲ್ಲಿಯ ಕಾರ್ತಿಕ್ ಪಾಟೀಲ್ ಕುಟುಂಬಕ್ಕೂ ಗಡಿಪಾರು ಮಾಡುವುದಾಗಿ ಬೆದರಿಸಿ ₹1 ಲಕ್ಷ ನೀಡುವಂತೆ ಒತ್ತಡ ಹೇರಿದ್ದರು. ಮುಂಗಡವಾಗಿ ₹50 ಸಾವಿರ ಪಡೆದ ಬಳಿಕ ಮತ್ತೆ ₹20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಮಾಹಿತಿ ಆಧರಿಸಿ ಲೋಕಾಯುಕ್ತ ಎಸ್ಪಿ ಸಿದ್ದರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಬ್ರಹ್ಮಪುರ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾನ್ಸ್ಟೆಬಲ್ ಪರಶುರಾಮ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಮತ್ತೊಬ್ಬ ಆರೋಪಿ ವೀರೇಶ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
