ಶಿವಮೊಗ್ಗ: ದೋಷಯುಕ್ತ ಮೊಬೈಲ್ ಫೋನ್ ಮಾರಾಟ ಮಾಡಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಮೊಬೈಲ್ ಕಂಪನಿ ಹಾಗೂ ಮಾರಾಟಗಾರರು ಗ್ರಾಹಕರಿಗೆ ಮೊಬೈಲ್ ಹಣವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಶಿವಮೊಗ್ಗದ ಗೋಪಾಳ ನಿವಾಸಿ ಮಂಜುನಾಥ ಜೆ.ವಿ. ಅವರು ನಗರದ ನೆಹರು ರಸ್ತೆಯಲ್ಲಿರುವ ಫೀಲಂ ಸೆಂಟರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ₹1,650 ಪಾವತಿಸಿ ಐಟೆಲ್ ಪಿ450 ಮೊಬೈಲ್ ಖರೀದಿಸಿದ್ದರು. ಖರೀದಿಸಿದ ಒಂದು ತಿಂಗಳೊಳಗೆ ಮೊಬೈಲ್ನಲ್ಲಿ ದೋಷ ಕಾಣಿಸಿಕೊಂಡಿದ್ದು, ಚಾರ್ಜರ್ ಬದಲಾಯಿಸಿದರೂ ಸಮಸ್ಯೆ ಪರಿಹಾರವಾಗಿರಲಿಲ್ಲ.
ಪದೇ ಪದೇ ಮನವಿ ಮಾಡಿದರೂ ಮೊಬೈಲ್ ಸರಿಪಡಿಸದ ಹಿನ್ನೆಲೆಯಲ್ಲಿ ಗ್ರಾಹಕರು ಮೊಬೈಲ್ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ನೋಟಿಸ್ ನೀಡಿದರೂ ಎದುರುದಾರರು ಹಾಜರಾಗದ ಕಾರಣ ಆಯೋಗ ಏಕಪಕ್ಷೀಯ ವಿಚಾರಣೆ ನಡೆಸಿತು.
ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠವು ಸೇವಾ ನ್ಯೂನತೆ ಎತ್ತಿಹಿಡಿದು ಆದೇಶ ನೀಡಿದೆ.
ಆದೇಶದಂತೆ:
ಮೊಬೈಲ್ನ ₹1,650 ಮೊತ್ತವನ್ನು 27-02-2026ರಿಂದ ವಾರ್ಷಿಕ ಶೇ.7ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಮರುಪಾವತಿಸಬೇಕು.ಮಾನಸಿಕ ವೇದನೆಗಾಗಿ ₹5,000 ಪರಿಹಾರ ನೀಡಬೇಕು.ದೂರು ವೆಚ್ಚವಾಗಿ ₹10,000 ಪಾವತಿಸಬೇಕು.ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದರೆ ವಾರ್ಷಿಕ ಶೇ.10ರ ಬಡ್ಡಿ ಅನ್ವಯವಾಗಲಿದೆ.
ಗ್ರಾಹಕರು 45 ದಿನಗಳೊಳಗೆ ಮೊಬೈಲ್ ಫೋನ್ ಅನ್ನು ಎದುರುದಾರರಿಗೆ ಹಸ್ತಾಂತರಿಸಬೇಕು ಎಂದು ಆಯೋಗ ಸೂಚಿಸಿದೆ.
