ಹೈದರಾಬಾದ್: ಹಣಕ್ಕಾಗಿ ಶಾಲಾ ಪ್ರಾಂಶುಪಾಲೆಯನ್ನು 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪದಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಆಗಸ್ಟ್ 11ರಂದು ತಮ್ಮ ನಿವಾಸದಲ್ಲಿದ್ದ ಪ್ರಾಂಶುಪಾಲೆ ರೂಪಾ ರೆಡ್ಡಿ ಅವರ ಮೇಲೆ ವಿದ್ಯಾರ್ಥಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಹಣ ಹಾಗೂ ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಎಸ್ಪಿ ಶರತ್ ಚಂದ್ರ ಪವಾರ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಲಾಗಿತ್ತು. ಸುಮಾರು 70 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು.
ರೂಪಾ ರೆಡ್ಡಿ ಅವರು ಕೊನೆಯದಾಗಿ ತಮ್ಮ ಅತ್ತೆಯೊಂದಿಗೆ ನಡೆಸಿದ್ದ ದೂರವಾಣಿ ಸಂಭಾಷಣೆಯಲ್ಲಿ ಯಾರನ್ನೋ ‘ಬಾಬು’ ಎಂದು ಕರೆದಿರುವುದು ಪೊಲೀಸರಿಗೆ ಪ್ರಮುಖ ಸುಳಿವಾಯಿತು. ಶಾಲೆಯಲ್ಲಿಯೂ ವಿದ್ಯಾರ್ಥಿಗಳನ್ನು ಇದೇ ಪದದಿಂದ ಕರೆಯುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಶಾಲೆ ಪುನರಾರಂಭಗೊಂಡ ಬಳಿಕ ಗೈರಾಗಿದ್ದ 13 ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲಾಯಿತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಏಕಾಏಕಿ ದುಬಾರಿ ವಸ್ತುಗಳಿಗೆ ಹಣ ಖರ್ಚು ಮಾಡುತ್ತಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.
ವಿಚಾರಣೆ ವೇಳೆ ಓರ್ವ ವಿದ್ಯಾರ್ಥಿಯ ಬಳಿ ₹1.54 ಲಕ್ಷ ನಗದು ಪತ್ತೆಯಾಯಿತು. ನೋಟುಗಳಲ್ಲಿ ರಕ್ತದ ಕಲೆಗಳು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಆ ರಕ್ತ ರೂಪಾ ರೆಡ್ಡಿ ಅವರದ್ದೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
