ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಆ. 10ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಗರದ ಮನೆ ಮನೆಗೆ ರಾಷ್ಟ್ರಧ್ವಜ ವಿತರಿಸಲಾಗುವುದು ಎಂದು ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ದೇಶಭಕ್ತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ. ಇದರ ಭಾಗವಾಗಿ ಶಿವಮೊಗ್ಗ ನಗರದಲ್ಲಿ ಈಗಾಗಲೇ ಸುಮಾರು 30 ಸಾವಿರ ಮನೆಗಳಿಗೆ ತಿರಂಗಾ ಧ್ವಜ ವಿತರಿಸಲಾಗಿದೆ ಎಂದರು.
ಆ. 10ರಂದು ಮನೆ ಮನೆಗೆ ತಿರಂಗಾ ವಿತರಿಸಲಾಗುವುದು. ಆ. 11ರಂದು ಸಂಜೆ 4 ಗಂಟೆಗೆ ಅಲ್ಲಮಪ್ರಭು ಮೈದಾನದಿಂದ ಕೃಷ್ಣ ಕೆಫೆ ವೃತ್ತದವರೆಗೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ನಡೆಯಲಿದ್ದು, ಸುಮಾರು 1,500 ಬೈಕ್ ಸವಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಆ. 13ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಮಾಜಿ ಯೋಧರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಆ. 14ರಂದು ಬೆಳಗ್ಗೆ 10 ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗೋಪಿ ವೃತ್ತದವರೆಗೆ ನಗರ ಘಟಕದ ವತಿಯಿಂದ ತಿರಂಗಾ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಮಂಜುನಾಥ್, ದೀನದಯಾಳ್, ಪ್ರಕಾಶ್ ಒಟ್ಟಿನಕೊಪ್ಪ, ಲತಾ ಶ್ರೀನಿವಾಸ್, ಯಶೋಧಾ, ಶ್ರೀನಾಗ್, ಮಂಜುನಾಥ್ ನವುಲೆ, ರಂಗೇಶ್, ಪರಮೇಶ್ ನಾಯ್ಕ್, ಮಹಾಲಕ್ಷ್ಮಿ, ರಶ್ಮಿ ಶ್ರೀನಿವಾಸ್, ಪ್ರದೀಪ್, ಗಾಡಿಕೊಪ್ಪ ಕುಮಾರ್, ಮುರಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
