ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕಾಮಗಾರಿ ಆದೇಶ ನೀಡುವ ಮುನ್ನವೇ ಕೆಪಿಸಿಎಲ್ನಿಂದ ಗುತ್ತಿಗೆದಾರ ಮೆಘಾ ಎಂಜಿನಿಯರಿಂಗ್ ಸಂಸ್ಥೆಗೆ ₹380 ಕೋಟಿಗೂ ಅಧಿಕ ಹಣ ಪಾವತಿಸಲಾಗಿದೆ ಎಂದು ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಶಿವಮೊಗ್ಗ ಸಂಘಟನೆಗಳು ಆರೋಪಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರವಾದಿ ಡಾ. ಎಲ್.ಕೆ. ಶ್ರೀಪತಿ, ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಇನ್ನೂ ದೊರೆತಿಲ್ಲ. ಅಲ್ಲದೆ, ಕಾಮಗಾರಿ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ಇರುವ ಸಂದರ್ಭದಲ್ಲಿ 2025ರ ಡಿಸೆಂಬರ್ 11ರಂದು ಒಂದೇ ದಿನ ₹380 ಕೋಟಿಗೂ ಅಧಿಕ ಹಣ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯ ಆರೋಪದ ಕುರಿತು ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಶರಾವತಿ ಯೋಜನೆಯನ್ನು ಹಿಂಪಡೆದು, ಹಣ ಪಾವತಿ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಜಾರ್ಜ್ಗೆ 15 ದಿನಗಳ ಗಡುವು
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪರಿಸರ ಸೂಕ್ಷ್ಮ ವಲಯದಲ್ಲಿ ಶರಾವತಿ ಯೋಜನೆ ಅನುಷ್ಠಾನಗೊಳಿಸುವುದೇ ಸರಿಯಲ್ಲ. ಇದರ ನಡುವೆ ₹380 ಕೋಟಿಗೂ ಅಧಿಕ ಹಣ ಪಾವತಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಹಣ ಪಾವತಿ ಕುರಿತು 15 ದಿನಗಳೊಳಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಜಿಲ್ಲೆಯ ಸಂಘ-ಸಂಸ್ಥೆಗಳು ಹಾಗೂ ಪರಿಸರವಾದಿಗಳೊಂದಿಗೆ ಚರ್ಚಿಸಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, “ಅವರು ನಮ್ಮ ಹುಡುಗ, ಅವರಿಗೆ ಅನಿಸಿದ್ದನ್ನು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಬೇಡ” ಎಂದರು. ಈಗಾಗಲೇ ಬಿಜೆಪಿ ಹಿರಿಯರು ತಮ್ಮನ್ನು ಸಂಪರ್ಕಿಸಿದ್ದು, ಎರಡು ತಿಂಗಳಲ್ಲಿ ಎಲ್ಲವನ್ನೂ ಒಂದು ರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಚುನಾವಣೆಗೆ ತಾವು ಅಥವಾ ತಮ್ಮ ಪುತ್ರ ಸ್ಪರ್ಧಿಸುವುದು ಶತಃಸಿದ್ಧ ಎಂದರು.
ಈ ನಡುವೆ ಬಿಜೆಪಿ ಹಿರಿಯ ನಾಯಕರು ತಮ್ಮನ್ನು ಸಂಪರ್ಕಿಸಿದ್ದು, ಎರಡು ತಿಂಗಳಲ್ಲಿ ಎಲ್ಲವನ್ನೂ ಒಂದು ರೂಪಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದ ಈಶ್ವರಪ್ಪ, ಮುಂದಿನ ಚುನಾವಣೆಯಲ್ಲಿ ತಾವು ಅಥವಾ ತಮ್ಮ ಪುತ್ರ ಸ್ಪರ್ಧಿಸುವುದು ಶತಃಸಿದ್ಧ ಎಂದು ಹೇಳಿದರು.
